Glory of the Reddy kings of Kashmir – ಭಾರತ ಭೂಶಿರ ಕಾಶ್ಮೀರದಲ್ಲೂ ರೆಡ್ಡಿರಾಜರ ಸುವರ್ಣ ವೈಭವ
Glory of the Reddy kings of Kashmir

ಭಾರತ ಭೂಶಿರ ಕಾಶ್ಮೀರದಲ್ಲೂ ರೆಡ್ಡಿಗಳ ಪ್ರಭಾವ (Glory of the Reddy kings of Kashmir) ಇತ್ತು ಎಂಬ ಅಪರೂಪದ ಐತಿಹಾಸಿಕ ಸತ್ಯವನ್ನು ‘ರಾಜತರಂಗಿಣಿ’ ಎಂಬ ಪುರಾತನ ಗ್ರಂಥ ಸವಿಸ್ತಾರವಾಗಿ ವಿವರಿಸಿದೆ. ಈ ಕುರಿತ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ…
ಭಾರತದ ಭೂಶಿರವೆಂದೇ ಪ್ರಸಿದ್ಧವಾದ ಕಾಶ್ಮೀರ ಕಣಿವೆಯ ಇತಿಹಾಸವು ಅನೇಕ ರಾಜವಂಶಗಳ ಅಚ್ಚಳಿಯದ ನೆನಪುಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಆ ಇತಿಹಾಸದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದ ಗ್ರಂಥವೇ ಕಲ್ಲಣ ಕವಿಯ ‘ರಾಜತರಂಗಿಣಿ’.
ಕಾಶ್ಮೀರವನ್ನು ಆಳಿದ ರಾಜರ ಸಮಗ್ರ ವಂಶಾವಳಿ, ಆಡಳಿತ, ಯುದ್ಧಗಳು, ಧರ್ಮಕಾರ್ಯಗಳು ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಕ್ರಮಬದ್ಧವಾಗಿ ದಾಖಲಿಸಿರುವ ಈ ಕೃತಿ, ಭಾರತದ ಪ್ರಪ್ರಥಮ ಹಾಗೂ ಏಕೈಕ ವೈಜ್ಞಾನಿಕ ಇತಿಹಾಸ ಗ್ರಂಥ ಎಂದು ವಿದ್ವಾಂಸರು ಗುರುತಿಸಿದ್ದಾರೆ.

ಇಂತಹ ಮಹತ್ವದ ಗ್ರಂಥದಲ್ಲಿ ದಕ್ಷಿಣ ಭಾರತದ ಶಕ್ತಿಶಾಲಿ ಸಮುದಾಯವಾಗಿರುವ ರೆಡ್ಡಿ ಅಥವಾ ರಟ್ಟ ವಂಶದ ಪ್ರಭಾವ ಕಾಶ್ಮೀರದಲ್ಲೂ ಇತ್ತು ಎಂಬುದನ್ನು ಕಲ್ಲಣ ಕವಿ ಸ್ಪಷ್ಟವಾಗಿ ಉಲ್ಲೇಖಿಸಿರುವುದು ಅತ್ಯಂತ ಗಮನಾರ್ಹ ಸಂಗತಿ.
ಇದನ್ನೂ ಓದಿ: Reddy Dynasty Rashtrakuta Empire- ರೆಡ್ಡಿಕುಲ ಹೆಮ್ಮೆಯ ಸಾಮ್ರಾಜ್ಯ ರಾಷ್ಟ್ರಕೂಟರ ಭವ್ಯ ಚರಿತ್ರೆ
ರಾಜತರಂಗಿಣಿಯಲ್ಲಿ ಉಲ್ಲೇಖಿತ ರಡ್ಡಾದೇವಿ
ರಾಜತರಂಗಿಣಿಯ ಪ್ರಕಾರ ಕ್ರಿ.ಶ. 1140ರ ಅವಧಿಯಲ್ಲಿ ಕಾಶ್ಮೀರವನ್ನು ಆಳಿದ 105ನೇ ರಾಜ ಜಯಸಿಂಹನ ಪಟ್ಟದರಸಿಯ ಹೆಸರು ರಡ್ಡಾದೇವಿ. ಈ ಹೆಸರು ಮಾತ್ರವೇ ಅಲ್ಲ, ಆಕೆಯ ವ್ಯಕ್ತಿತ್ವ, ಧರ್ಮನಿಷ್ಠೆ ಹಾಗೂ ಸಾಮಾಜಿಕ ಸೇವೆಗಳನ್ನೂ ಕಲ್ಲಣ ಕವಿ ಸವಿಸ್ತಾರವಾಗಿ ವರ್ಣಿಸಿದ್ದಾರೆ.
ರಡ್ಡಾದೇವಿ ತನ್ನ ಜೀವನದ ಕೊನೆಯ ಅವಧಿಯಲ್ಲಿ ಕೇವಲ ಅರಮನೆಯೊಳಗೆ ಸೀಮಿತವಾಗಿರದೆ, ದೇಶದ ವಿವಿಧ ಭಾಗಗಳಿಗೆ ಪ್ರವಾಸ ಮಾಡಿ ಅನೇಕ ಧರ್ಮಕಾರ್ಯಗಳನ್ನು ಕೈಗೊಂಡಿದ್ದಳು ಎಂಬುದು ಆಕೆಯ ವೈಶಾಲ್ಯ ಮನೋಭಾವವನ್ನು ತೋರಿಸುತ್ತದೆ. ದೇವಾಲಯ ನಿರ್ಮಾಣ, ಧರ್ಮಪ್ರಚಾರ, ದಾನಧರ್ಮಗಳಲ್ಲಿ ಆಕೆ ತೊಡಗಿಸಿಕೊಂಡಿದ್ದಳು.

ರುದ್ರೇಶ್ವರ ನಿಲಯ ದೇವಾಲಯ
ರಡ್ಡಾದೇವಿ ಕಟ್ಟಿಸಿದ ಪ್ರಮುಖ ದೇಗುಲವೆಂದರೆ ರುದ್ರೇಶ್ವರ ನಿಲಯ ದೇವಾಲಯ. ಈ ದೇವಾಲಯವನ್ನು ಅಮೃತ ಶಿಲೆಯಿಂದ ನಿರ್ಮಿಸಲಾಗಿದೆ. ಗೋಪುರವನ್ನು ಚಿನ್ನದಿಂದ ಆವೃತ್ತಗೊಳಿಸಲಾಗಿದೆ ಎಂಬ ವಿವರಗಳು ಆ ಕಾಲದಲ್ಲಿ ರಡ್ಡಾದೇವಿ ಹೊಂದಿದ್ದ ಅಪಾರ ಸಂಪತ್ತು, ರಾಜಕೀಯ ಪ್ರಭಾವ ಹಾಗೂ ಧಾರ್ಮಿಕ ನಿಷ್ಠೆಯನ್ನು ಸ್ಪಷ್ಟಪಡಿಸುತ್ತವೆ.

ಇದನ್ನೂ ಓದಿ: End Caste Divisions Reddys Unity- ಪಂಗಡ ಬೇಧ ಬಿಡಿ ರೆಡ್ಡಿಕುಲವೊಂದೇ ಎಂಬ ಅಭಿಮಾನವಿಡಿ
ಶಂಕನ್ನರಾಜ (ರಡ್ಡನು) ಮತ್ತೊಂದು ಐತಿಹಾಸಿಕ ಪುರಾವೆ
ಇನ್ನೂ ಹೆಚ್ಚು ವಿಸ್ಮಯಕರ ಸಂಗತಿಯೆಂದರೆ, ರಡ್ಡಾದೇವಿಯ ಅವಧಿಗಿಂತ ನಾಲ್ಕು ತಲೆಮಾರುಗಳ ಹಿಂದೆ ಕಾಶ್ಮೀರವನ್ನು ಶಂಕನ್ನರಾಜ ಆಳಿದ್ದನು. ರಾಜತರಂಗಿಣಿಯ ಪ್ರಕಾರ ಈ ಶಂಕನ್ನರಾಜನು ಕಾಶ್ಮೀರದ ಶಕ್ತಿಶಾಲಿ ರಾಜ ಉಚ್ಛಲ ಚಕ್ರವರ್ತಿಯನ್ನು ಮಣಿಸಿ ಸಿಂಹಾಸನವೇರಿದ್ದನು.

ಕಲ್ಲಣ ಕವಿ ಸ್ಪಷ್ಟವಾಗಿ ಹೇಳುವಂತೆ ಶಂಕನ್ನರಾಜನ ಇನ್ನೊಂದು ಹೆಸರು ‘ರಡ್ಡನು’ ಎಂದು. ಚಾಣಾಕ್ಷತೆ, ರಾಜಕೀಯ ಕುಶಲತೆ ಹಾಗೂ ಸೈನಿಕ ಶಕ್ತಿಯಿಂದ ಸಿಂಹಾಸನವನ್ನು ಪಡೆದುಕೊಂಡ ರಡ್ಡನು (ಶಂಕನ್ನರಾಜ) ಕಡಿಮೆ ಅವಧಿಗೆ ಆಡಳಿತ ನಡೆಸಿದ್ದರೂ, ಇತಿಹಾಸದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿ ಮೂಡಿಸಿದ್ದಾನೆ.
‘ರಡ್ಡ’, ‘ರೆಡ್ಡಿ’ ಮತ್ತು ‘ರಟ್ಟ’ – ಒಂದೇ ಪರಂಪರೆಯ ವಿಭಿನ್ನ ರೂಪಗಳು
ಶಂಕನ್ನರಾಜ (ರಡ್ಡನು) ಮತ್ತು ರಡ್ಡಾದೇವಿ ಎಂಬ ಹೆಸರುಗಳಲ್ಲಿ ಕಾಣಿಸಿಕೊಳ್ಳುವ ‘ರಡ್ಡ’ ಅಥವಾ ‘ರೆಡ್ಡಿ’ ರೂಪಗಳು, ಕೇವಲ ಸಂಜ್ಞಾತ್ಮಕವಾಗಿಲ್ಲ. ಇವುಗಳು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ರಟ್ಟ ಅಥವಾ ರೆಡ್ಡಿ ವಂಶದೊಂದಿಗೆ ನೇರ ಸಂಬಂಧವನ್ನು ಸೂಚಿಸುತ್ತವೆ.
ಇದರಿಂದ ಹೊರಹೊಮ್ಮುವ ಪರಮ ಸತ್ಯವೇನೆಂದರೆ; ರಟ್ಟರು / ರೆಡ್ಡಿಗಳು ಕೇವಲ ದಕ್ಷಿಣ ಭಾರತಕ್ಕೆ ಸೀಮಿತರಾಗಿರಲಿಲ್ಲ. ಅವರು ಉತ್ತರ ಭಾರತದವರೆಗೂ ವ್ಯಾಪಿಸಿಕೊಂಡಿದ್ದರು. ಕಾಶ್ಮೀರದಂತಹ ಸೂಕ್ಷ್ಮ ರಾಜಕೀಯ ಪ್ರದೇಶದಲ್ಲೂ ಆಡಳಿತ ನಡೆಸುವಷ್ಟು ಪ್ರಬಲರಾಗಿದ್ದರು. ಇದು ರೆಡ್ಡಿ ವಂಶದ ವ್ಯಾಪಕತೆಗೆ ಪ್ರಖರ ಪುರಾವೆಯಾಗಿದೆ.

ಇದನ್ನೂ ಓದಿ: Uyyalawada Narasimha Reddy- ಅಪ್ರತಿಮ ದೇಶಭಕ್ತ ಉಯ್ಯಾಲವಾಡ ನರಸಿಂಹರೆಡ್ಡಿ | ಜಯಂತೋತ್ಸವದ ವಿಶೇಷ ಲೇಖನ
ರೆಡ್ಡಿಗಳು- ಪ್ರಾಚೀನ ಭಾರತವನ್ನು ವ್ಯಾಪಿಸಿದ ಆಡಳಿತ ವಂಶ
ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದರೆ, ರೆಡ್ಡಿಗಳು ಅಥವಾ ರಟ್ಟರು ಕೃಷಿ, ಸೇನಾ ಸಂಘಟನೆ, ಆಡಳಿತ, ಧರ್ಮ ಮತ್ತು ಸಂಸ್ಕೃತಿಯಲ್ಲಿ ಅಪಾರ ಕೊಡುಗೆ ನೀಡಿದ ವಂಶವೆಂದು ತಿಳಿಯುತ್ತದೆ. ದಕ್ಷಿಣ ಭಾರತದಿಂದ ಆರಂಭವಾದ ಈ ಪರಂಪರೆ ಉತ್ತರ ಭಾರತದ ವರೆಗೂ ವ್ಯಾಪಿಸಿ, ವಿವಿಧ ಪ್ರಾಂತ್ಯಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ಆಡಳಿತ ನಡೆಸಿದೆ.
ಕಾಶ್ಮೀರದಂತಹ ದೂರದ ಪ್ರದೇಶದಲ್ಲಿ ರೆಡ್ಡಿ ಮೂಲದ ರಾಜರು ಮತ್ತು ರಾಣಿಯರ ಉಲ್ಲೇಖ ದೊರಕುವುದು, ಈ ವಂಶದ ವಿಸ್ತಾರ, ಸಾಮರ್ಥ್ಯ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತದೆ.
ಐತಿಹಾಸಿಕ ವಿಸ್ಮಯಗಳ ಆಗರ ‘ರೆಡ್ಡಿ ಪರಂಪರೆ’ ಗ್ರಂಥ
ಇಂತಹ ಅನೇಕ ಅಪರೂಪದ, ಮರೆತು ಹೋಗಿರುವ ಐತಿಹಾಸಿಕ ಸತ್ಯಗಳನ್ನು ಒಟ್ಟುಗೂಡಿಸಿ ಸಮಗ್ರವಾಗಿ, ನಿಖರವಾಗಿ ನೀಡುವ ಕೃತಿ ಎಂದರೆ ಶ್ರೀ ಮೊ. ಮು. ಆಂಜನಪ್ಪ ರೆಡ್ಡಿಯವರ ‘ರೆಡ್ಡಿ ಪರಂಪರೆ’ ಗ್ರಂಥ.
ಈ ಗ್ರಂಥದಲ್ಲಿ ರೆಡ್ಡಿ ವಂಶದ ಮೂಲ, ವಿವಿಧ ಕಾಲಘಟ್ಟಗಳ ಆಡಳಿತ, ಧರ್ಮ, ಸಂಸ್ಕೃತಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಉತ್ತರ-ದಕ್ಷಿಣ ಭಾರತದ ಸಂಪರ್ಕ… ಎಲ್ಲವನ್ನೂ ಸಂಶೋಧನಾತ್ಮಕವಾಗಿ ವಿವರಿಸಲಾಗಿದೆ.

ಇದನ್ನೂ ಓದಿ: Reddykula Shakhegalu- ವೈವಿಧ್ಯತೆಯಲ್ಲಿ ಐಕ್ಯತೆ ಸಾರುವ ರೆಡ್ಡಿಕುಲ ಶಾಖೆಗಳು
ಸಮಾರೋಪ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ವ್ಯಾಪಿಸಿರುವ ರೆಡ್ಡಿ ಅಥವಾ ರಟ್ಟ ವಂಶದ ಪ್ರಭಾವವನ್ನು ಅರಿಯಲು, ಕಲ್ಲಣ ಕವಿಯ ರಾಜತರಂಗಿಣಿಯಲ್ಲಿ ಉಲ್ಲೇಖಿತ ರಡ್ಡನು ಮತ್ತು ರಡ್ಡಾದೇವಿಗಳ ಹೆಸರುಗಳೇ ಸಾಕ್ಷಿಯಾಗಿವೆ. ಇವುಗಳು ನಮ್ಮ ಇತಿಹಾಸದ ಹೆಮ್ಮೆಯ ಪುಟಗಳು.
ಪ್ರತಿಯೊಬ್ಬ ರೆಡ್ಡಿ ಬಂಧುವೂ ಮಾತ್ರವಲ್ಲ, ಭಾರತೀಯ ಇತಿಹಾಸವನ್ನು ಪ್ರೀತಿಸುವ ಪ್ರತಿಯೊಬ್ಬರೂ ಇಂತಹ ಗ್ರಂಥಗಳನ್ನು ಓದಿ, ನಮ್ಮ ಪೂರ್ವಜರ ವೈಭವವನ್ನು ಅರಿಯಬೇಕು. ಇತಿಹಾಸವನ್ನು ತಿಳಿದಾಗಲೇ ಗುರುತು ಉಳಿಯುತ್ತದೆ; ಗುರುತು ಉಳಿದಾಗಲೇ ಗರ್ವವಿಲ್ಲದ ಹೆಮ್ಮೆ ಮೂಡುತ್ತದೆ!
- ಮೊ ಮು ಆಂಜನಪ್ಪ ರೆಡ್ಡಿ






really we are happy to learn such a extraordinary and valuable history of Reddys
heartfull congratulations sir
thanking yours