HistoryNews

Momu Anjanappa Reddy life of struggle- ಮೊ ಮು ಆಂಜನಪ್ಪ ರೆಡ್ಡಿಯವರ ಹೋರಾಟದ ಬದುಕು

ಸಹೃದಯಿ ನಾಯಕನ ಹೋರಾಟಗಳ ಹೊರಳು ನೋಟ...

ಸೈದ್ಧಾಂತಿಕ ರಾಜಕೀಯ, ಸಾಮಾಜಿಕ ಹೋರಾಟ, ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುವ ಮೊ ಮು ಆಂಜನಪ್ಪ ರೆಡ್ಡಿ ಅವರ ಹೋರಾಟಗಳ (Momu Anjanappa Reddy life of struggle) ಹೊರಳು ನೋಟ ಇಲ್ಲಿದೆ…

ಇಂದು ರಾಜಕೀಯ ರಂಗ ಸಾಕಷ್ಟು ಬದಲಾವಣೆಯಾಗಿದೆ. ಸಾಮಾಜಿಕ ಹೋರಾಟಗಳು ಕೂಡ ಬೇರೆಯದೇ ರೂಪ ಪಡೆದುಕೊಂಡಿವೆ. ಸಂಘಟನೆಯಲ್ಲೂ ಸ್ವಾರ್ಥ ಮನೆ ಮಾಡಿಕೊಂಡಿದೆ. ಆದರೆ, ಈಗ್ಗೆ 70-80ರ ದಶಕದಲ್ಲಿ ಹೀಗಿರಲಿಲ್ಲ. ಆವತ್ತು ರಾಜಕೀಯ, ಸಾಮಾಜಿಕ ಹೋರಾಟ, ಸಂಘಟನೆ ಎಲ್ಲವೂ ತೂಕಬದ್ಧವಾಗಿದ್ದವು. ತತ್ವಾದರ್ಶ, ನೈತಿಕತೆ ತುಂಬಿರುತ್ತಿತ್ತು. 70-80ರ ದಶಕಗಳ ಹೋರಾಟ, ಸಂಘಟನೆಯ ನೆನಪು ಮಾಡಿಕೊಂಡರೆ ಮೊ ಮು ಆಂಜನಪ್ಪ ರೆಡ್ಡಿ (Mo mu Anjanappareddy) ಅವರಂತಹ ಅನೇಕರ ಹೋರಾಟದ ಬದುಕಿನ ಚಿತ್ರಣ ಕಣ್ಮುಂದೆ ಮೂಡುತ್ತದೆ.

ಹೌದು, ಮೋಟಪ್ಪನಪಾಳ್ಯ ಮುನಿಸ್ವಾಮಿರೆಡ್ಡಿ ಆಂಜನಪ್ಪರೆಡ್ಡಿ ಎಂಬ ತಮ್ಮ ಮೂಲ ಹೆಸರನ್ನು ಶುದ್ಧ ಕನ್ನಡದಲ್ಲಿ ಮೊ.ಮು ಆಂಜನಪ್ಪರೆಡ್ಡಿ ಎಂದು ಸಂಕ್ಷಿಪ್ತ ಮಾಡಿಕೊಂಡಿರುವ ‘ಮೊಮು’ (MOMU) ಅವರ ಹೋರಾಟದ ಕಿಚ್ಚು ಆರಂಭವಾಗಿದ್ದೇ ಕನ್ನಡದ ಮೇಲಿನ ಪ್ರೀತಿ, ಅಭಿಮಾನದಿಂದ.

ಎಳೆಯಪ್ರಾಯದ ಹರೆಯದಲ್ಲೇ ಆ ಕಾಲದ ಕನ್ನಡ ಹೋರಾಟಗಳಲ್ಲಿ ತೊಡಗಿಸಿಕೊಂಡ ಆಂಜನಪ್ಪರೆಡ್ಡಿ ಅವರು ರಾಜ್‌ಕುಮಾರ್ ಅವರ ಕನ್ನಡ ಚಲನಚಿತ್ರಗಳ ಅಪ್ಪಟ ಅಭಿಮಾನಿ. ಕನ್ನಡ ಚಿತ್ರಗಳ ಬಿಡುಗಡೆ ಅಪರೂಪವಾಗಿದ್ದ ಬೆಂಗಳೂರಿನ ದಂಡು ಪ್ರದೇಶದ ಆಗಿನ ಆದರ್ಶ ಚಿತ್ರ ಮಂದಿರದಲ್ಲಿ ರಾಜ್‌ಕುಮಾರ್ ಅವರ ಚಲನಚಿತ್ರ ಬಿಡುಗಡೆಗಾಗಿ ಮದ್ರಾಸ್ ವರೆಗೂ ಹೋಗಿ ರಾಜ್ ದಂಪತಿಗಳ ಮನ ಒಲಿಸಿ ಚಿತ್ರ ತೆರೆ ಕಾಣುವಂತೆ ಮಾಡಿದ್ದಿದೆ.

ಭ್ರಷ್ಟಾಚಾರ, ನಿರುದ್ಯೋಗದ ವಿರುದ್ಧದ ಹೋರಾಟಗಳು

80ರ ದಶಕದಲ್ಲಿ ‘ಯುವ ಸೇನೆ’ಯ ನೇತೃತ್ವ ವಹಿಸಿದ್ದ ಮೊ ಮು ಆಂಜನಪ್ಪ ರೆಡ್ಡಿ ಅವರು ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ ಮತ್ತು ಬೆಲೆ ಏರಿಕೆಯ ವಿರುದ್ಧ ಗಟ್ಟಿಧ್ವನಿ ಮೊಳಗಿಸಿದ್ದರು. ವಿಧಾನಸಭೆ ಕಲಾಪದ ಸಮಯದಲ್ಲೇ ಕೈ ಬರಹದ ಕರಪತ್ರ ಎರಚಿ ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬೇಕೆ? ಕಪ್ಪು ಹಣದ ಖದೀಮರ ಮಕ್ಕಳು ದೇಶವನ್ನಾಳಬೇಕೆ? ರೈತರ ಮಕ್ಕಳು ರೈತರಾಗಿಯೇ ಉಳಿಯಬೇಕೇ? ಲಂಚಕೋರರ ಮಕ್ಕಳು ಅಧಿಕಾರಿಗಳಾಗಬೇಕೆ? ಎಂಬ ಉದ್ಘೋಷಗಳನ್ನು ಮೊಳಗಿಸುತ್ತ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದ್ದಾರೆ.

  • ನಿರುದ್ಯೋಗ ಸಮಸ್ಯೆ ಪರಿಹರಿಸುವುದು
  • ಭ್ರಷ್ಟಾಚಾರ ತಡೆಗಟ್ಟುವುದು
  • ಹೊಟೇಲ್ ತಿಂಡಿ ಬೆಲೆ, ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ತಡೆಗಟ್ಟುವುದು
  • ದಲಿತರ ಮೇಲೆ ನಡೆಯುವ ಗೂಂಡಾಗಿರಿಯನ್ನು ತಡೆಯುವುದು
  • ವರದಕ್ಷಿಣೆ ಪಿಡುಗಿನಿಂದ ಬಲಿಯಾಗುತ್ತಿರುವ ಸಹಸ್ರಾರು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದು

…ಹೀಗೆ ಹಲವು ಗಂಭೀರವಾದ ಧ್ಯೇಯ ವಾಕ್ಯಗಳನ್ನು ಇಟ್ಟುಕೊಂಡು ಮೊ ಮು ಆಂಜನಪ್ಪ ರೆಡ್ಡಿಯವರ ನೇತೃತ್ವದ ‘ಯುವ ಸೇನೆ’ಯ ಹೋರಾಟಗಳು ಅಂದು ಬೆಂಗಳೂರಿನ ಜನರನ್ನು ಬಹುವಾಗಿ ಸೆಳೆದಿದ್ದವು.

ಬಡವರಿಗೆ ಆಗುತ್ತಿರುವ ಅನ್ಯಾಯ ಮತ್ತು ಅವರ ಮೇಲೆ ನಡೆಯುತ್ತಿರುವ ಹಲ್ಲೆ, ದಬ್ಬಾಳಿಕೆಯನ್ನು ಖಂಡಿಸಿ 1977ರಲ್ಲಿ ಮೊ ಮು ಆಂಜನಪ್ಪ ರೆಡ್ಡಿ ಅವರ ಮುಂಖಂಡತ್ವದಲ್ಲಿ ಇಂದಿರಾ ನಗರದಿಂದ ಮುಖ್ಯಮಂತ್ರಿಯವರ ನಿವಾಸದ ವರೆಗೂ ಬಹಿರಂಗ ಮೆರವಣೆಗೆ ಹಮ್ಮಿಕೊಳ್ಳಲಾಗಿತ್ತು. ಮೊ ಮು ಆಂಜನಪ್ಪ ರೆಡ್ಡಿ ಅವರನ್ನು ಬಡವರ ಪರವಾಗಿ ಮಿಡಿಯುವ ಹೃದಯವಂತ ಯುವ ನಾಯಕರಾಗಿ ಅಂದು ಜನಮನವನ್ನು ತಣಿಸಿದ್ದರು.

ಸೈದ್ಧಾಂತಿಕ ರಾಜಕೀಯ ಹೋರಾಟಗಳು

ಇನ್ನು ರಾಜಕೀಯವಾಗಿಯೂ ಅಷ್ಟೇ ಸೈದ್ಧಾಂತಿ ಹೋರಾಟ ನಡೆಸಿಕೊಂಡು ಬಂದಿದ್ದ ಮೊ ಮು ಆಂಜನಪ್ಪ ರೆಡ್ಡಿಯವರು ಅಂದಿನ ಅಖಂಡ ವರ್ತೂರು ವಿಧಾನಸಭಾ ಕ್ಷೇತ್ರದ ಜನತಾದಳದ ಕಾರ್ಯಾಧ್ಯಕ್ಷರಾಗಿ ಜನಪರ, ಸಮಾಜದ ಪರವಾಗಿ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಕ್ಷೇತ್ರದಲ್ಲಿ ಬಡವರಿಗೆ ನಿವೇಶನ ಹಂಚಿಕೆಯಲ್ಲಿ ನಡೆದ ಹಗರಣ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಸೇರಿದಂತೆ ಅನೇಕ ಅಧ್ವಾನಗಳ ವಿರುದ್ಧ ಹೋರಾಟ ಮಾಡಿದ್ದಾರೆ.

ಹೀಗೆ ಕ್ರಮೇಣ ವಿಶಿಷ್ಟ ಹೋರಾಟಗಳಿಂದ ಕ್ಷೇತ್ರ ಮಟ್ಟದ ರಾಜಕಾರಣದಿಂದ ರಾಜ್ಯ ಮಟ್ಟದ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ಆಂಜನಪ್ಪ ರೆಡ್ಡಿ ಅವರು ಮುಂದೆ ಜೆ.ಹೆಚ್.ಪಟೇಲ್ ಹಾಗೂ ಹಿರಿಯ ರಾಜಕಾರಣಿಯಾದ ಜಾರ್ಜ್ ಪರ್ನಾಂಡಿಸ್‌ರAತಹ ದಿಗ್ಗಜರ ಒಡನಾಟ ಮತ್ತಷ್ಟು ಪಕ್ವವಾದರು. 80ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು, ಜೆ.ಹೆಚ್. ಪಾಟೀಲ್‌ರೊಂದಿಗೆ ‘ಕ್ರಾಂತಿರAಗ’ ಕಟ್ಟಿದ ಯುವ ಮುಖಂಡರಲ್ಲಿ ಇವರೂ ಒಬ್ಬರು.

2007ರಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂಡಿ ಶೋಷಿತ ವರ್ಗದ ಪರವಾಗಿ ನಾಡಿನಾದ್ಯಂತ ಧ್ವನಿ ಎತ್ತಿದರು. ರಾಜಕೀಯ ಉದ್ಧೇಶದಿಂದ ಚುನಾವಣೆ ಸಮಯಕ್ಕೆ ಮಾತ್ರ ಪ್ರತ್ಯಕ್ಷವಾಗುವ ಇತರ ನಾಯಕರಂತಲ್ಲದ ಆಂಜನಪ್ಪ ರೆಡ್ಡಿ ಅವರು ಇದೀಗ ಸಾಕಷ್ಟು ಅವಕಾಶಗಳಿದ್ದರೂ ಚುನಾವಣಾ ರಾಜಕೀಯದಿಂದ ಬಹು ದೂರ ಉಳಿದಿದ್ದಾರೆ.

ರೆಡ್ಡಿ ಜನಾಂಗ ಸಂಘಟನೆಯಲ್ಲಿ…

ನಾಡು-ನುಡಿ ಹೋರಾಟ, ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧದ ಹೋರಾಟ, ಬಡವರ ಮೇಲಿನ ಹಲ್ಲೆ, ದಬ್ಬಾಳಿಕೆ ಖಂಡಿಸಿ ನಡೆಸಿದ ಹೋರಾಟ, ರಾಜಕೀಯ ಶುದ್ಧತೆಗಾಗಿ ಮಾಡಿದ ಹೋರಾಟಗಳಂತೆ ರೆಡ್ಡಿ ಸಮುದಾಯ ಸಂಘಟನೆ ಮತ್ತು ಶ್ರೇಯಸ್ಸಿಗಾಗಿಯೂ ಮೊ ಮು ಆಂಜನಪ್ಪ ರೆಡ್ಡಿ ಅವರು ನಿರಂತರವಾಗಿ ಶ್ರಮಿಸುತ್ತ ಬಂದಿದ್ದಾರೆ.

2007ರಲ್ಲಿ ವೇಮನರೆಡ್ಡಿ ಜನ ವೇದಿಕೆಯ ಮೂಲಕ ಬೆಂಗಳೂರಿನಲ್ಲಿ ರೆಡ್ಡಿ ಜನಾಂಗ ಸಂಘಟನೆಗಾಗಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡು ಅಂದು ಸಮುದಾಯದ ಮೂಲ ಸಮಸ್ಯೆಯಾಗಿದ್ದ ಪ್ರವರ್ಗ 3(ಎ)ಯಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ರೆಡ್ಡಿ ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕೆಂದು ಅಂದಿನ ಸರ್ಕಾರವನ್ನು ಆಗ್ರಹಿಸಿದ್ದರು.

ಪ್ರವರ್ಗ 3(ಎ)ರಲ್ಲಿ 33 ಉಪ ಪಂಗಡಗಳಿದ್ದು ಮೀಸಲಾತಿ ಲಾಭ ರೆಡ್ಡಿ ಜನಾಂಗಕ್ಕೆ ಸಿಗುತ್ತಿಲ್ಲ. ರಾಜ್ಯಾದ್ಯಂತ ಲಕ್ಷಾಂತರ ಜನಸಂಖ್ಯೆಯನ್ನು ಹೊಂದಿರುವ ರೆಡ್ಡಿಗಳಿಗೆ ಸೂಕ್ತ ಮೀಸಲಾತಿ ಕಲ್ಪಿಸಬೇಕಿದ್ದು; 3(ಎ) ಪ್ರವರ್ಗದಲ್ಲೂ ಮೀಸಲಾತಿ ತರಬೇಕು, ಕೆನೆಪದರ ವ್ಯವಸ್ಥೆ ಜಾರಿಯಾಗಬೇಕೆಂದು ಆಂಜನಪ್ಪ ರೆಡ್ಡಿ ಅವರು ಪ್ರತಿಪಾದಿಸಿದ್ದರು.

ಬೆಂಗಳೂರಿನ ಜಯನಗರ, ಇಂದಿರಾ ನಗರ, ಎಚ್‌ಎಸ್‌ಆರ್ ಲೇಔಟ್ ಭಾಗದ ಐಟಿ ಪಾರ್ಕ್’ಗಳಿಗೆ ರೆಡ್ಡಿ ಜನಾಂಗ ಭೂಮಿ ನೀಡಿದ್ದು ಇದೀಗ ಸರ್ಜಾಪುರ ರಸ್ತೆಯಲ್ಲಿ ಎಸ್‌ಇಝಡ್ ನೆಪದಲ್ಲಿ ಮತ್ತೆ ಸರ್ಕಾರ ನಮ್ಮ ಭೂಮಿಯನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ನ್ಯಾಯ ಸಮ್ಮತವಲ್ಲ. ತಕ್ಷಣವೇ ಈ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದರು.

ರೆಡ್ಡಿ ಬಂಧುಗಳಲ್ಲಿ ರೆಡ್ಡಿಕುಲದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವು ಸಮಾವೇಶಗಳನ್ನು ಸಂಘಟಿಸಿದ ಕೀರ್ತಿ ಆಂಜನಪ್ಪ ರೆಡ್ಡಿಯವರಿಗೆ ಸಲ್ಲುತ್ತದೆ.

ಸಾಹಿತ್ಯ, ಸಾಂಸ್ಕೃತಿಕ ಸೇವೆಗಳು

ಇನ್ನು ಸಾಹಿತ್ಯ, ಸಾಂಸ್ಕೃತಿಕವಾಗಿಯೂ ಮನಃಪೂರ್ವಕವಾಗಿ ತೊಡಗಿಸಿಕೊಂಡು ಬಂದಿರುವ ಮೊ ಮು ಆಂಜನಪ್ಪ ರೆಡ್ಡಿ ಅವರು ತಮ್ಮ ಮಹತ್ವಪೂರ್ಣ ಸಂಶೋಧನೆಗಳು, ಅಮೂಲ್ಯ ಕೃತಿಗಳ ಮೂಲಕ ರೆಡ್ಡಿ ಜನಾಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು ಸ್ಮರಣೀಯ.

ರೆಡ್ಡಿಗಳು ಮೂಲತಃ ಕನ್ನಡಿಗರು, ಕನ್ನಡವೇ ಅವರ ಮನೆ ಭಾಷೆ, ರಾಷ್ಟ್ರವನ್ನೇ ಆಳಿದ ಭವ್ಯ ಪರಂಪರೆ ರೆಡ್ಡಿಗಳದ್ದು ಎಂಬ ಅಚ್ಚರಿಯ ಸತ್ಯಗಳನ್ನು ಸಂಶೋಧನೆಗಳ ಮೂಲಕ ಮನದಟ್ಟು ಮಾಡಿಸಿದ ಕೀರ್ತಿ ಮೊ ಮು ಆಂಜನಪ್ಪ ರೆಡ್ಡಿ ಅವರಿಗೆ ಸಲ್ಲುತ್ತದೆ.

ಕರ್ನಾಟಕ ರೆಡ್ಡಿಜನ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜಂಟಿ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಸಂಘದ ಸಹಯೋಗದಲ್ಲಿ ಪ್ರಕಟವಾಗುತ್ತಿದ್ದ ‘ವೇಮನವಾಣಿ’ಯ ಸಂಪಾದಕರಾಗಿ ಚಿಕ್ಕ ಚಿಕ್ಕ ಸಂಶೋಧನಾ ಬರಹಗಳ ಮೂಲಕ ರೆಡ್ಡಿಗಳ ಚರಿತ್ರೆಯನ್ನು ಕಟ್ಟಿಕೊಟ್ಟ ಆಂಜನಪ್ಪ ರೆಡ್ಡಿ ಅವರು ಕ್ರಮೇಣ ‘ರೆಡ್ಡಿ ಪರಂಪರೆ’ಯಂತಹ ಬೃಹತ್ ಗ್ರಂಥವನ್ನೇ ಉಡುಗೊರೆಯಾಗಿ ನೀಡಿದ್ದಾರೆ.

‘ರೆಡ್ಡಿ ಪರಂಪರೆ’ ಕೃತಿ ನಿಜಕ್ಕೂ ರೆಡ್ಡಿ ಜನರ ‘ಭಗವದ್ಗೀತೆ’ ಎಂದರೆ ಖಂಡಿತ ತಪ್ಪಾಗಲಾರದು. ರೆಡ್ಡಿ ಪರಂಪರೆ ಗ್ರಂಥದ ಜೊತೆಗೆ ದಾರ್ಶನಿಕ ವೇಮನ, ರೆಡ್ಡಿಕುಲ ಇತಿಹಾಸ ಮತ್ತು ಬೆಡಗುಗಳು, ಶಿಕ್ಷಣ ಶಿಲ್ಪಿ ಸರ್ ಸಿ.ಆರ್. ರೆಡ್ಡಿ, ವೇಮನ ಜೀವನ್ಮುಖಿ ನುಡಿಮುತ್ತುಗಳು, ವೇಮನ ನೀತಿ ಪದ್ಯಗಳು ಸೇರಿದಂತೆ ಅನೇಕ ಸಂಶೋಧನಾತ್ಮಕ ಗ್ರಂಥಗಳನ್ನು ರಚಿಸಿ ಯುವ ಜನತೆಯಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ್ದಾರೆ.

ಸಮಾಜದಲ್ಲಿ ಘನತೆಯ ನಾಯಕ

ಹೀಗೆ ಜೀವನದುದ್ದಕ್ಕೂ ಬರೀ ಹೋರಾಟ, ಸಮಾಜ ಸೇವೆ, ರೆಡ್ಡಿ ಜನಾಂಗ ಸಂಘಟನೆ, ಸಾಹಿತ್ಯ-ಸಂಶೋಧನೆಗಳ ಒಟನಾಟದಲ್ಲಿಯೇ ಬಂದ ಮೊ ಮು ಆಂಜನಪ್ಪ ರೆಡ್ಡಿ ಅವರಿಗೆ ಸಮಾಜದಲ್ಲಿ, ಅದರಲ್ಲೂ ರೆಡ್ಡಿ ಜನಾಂಗದಲ್ಲಿ ಅತ್ಯಂತ ಹೆಚ್ಚಿನ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ಕೆಲವು ಕುತಂತ್ರಿಗಳ ಒಳ ರಾಜಕೀಯ, ಕುತ್ಸಿತ ಹುನ್ನಾರಗಳಿಂದಾಗಿ ಆಂಜನಪ್ಪ ರೆಡ್ಡಿಯವರಿಗೆ ನಿಜವಾಗಿಯೂ ಸಲ್ಲಬೇಕಾದ ಸ್ಥಾನಮಾನಗಳು ಸಲ್ಲದೇ ಇರುವುದು ಬೇಸರದ ಸಂಗತಿ. ಆದರೆ, ಆಂಜನಪ್ಪ ರೆಡ್ಡಿ ಅವರು ಇದ್ಯಾವುದನ್ನೂ ಲೆಕ್ಕಿಸದೇ ಎಲ್ಲ ಗೊಡವೆ ಬಿಟ್ಟು ಇದೀಗ 69ರ ಪ್ರಾಯದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವುದು ವಿಶೇಷ.

ಇವತ್ತು ದೊಡ್ಡ ರಾಜಕಾರಣಿಗಳಂತೆ, ಮಹಾನ್ ನಾಯಕರಂತೆ ಮೆರೆಯುತ್ತಿರುವ ಬಹುತೇಕರು ಮೊ ಮು ಆಂಜನಪ್ಪ ರೆಡ್ಡಿ ಅವರು ರಾಜಕೀಯ, ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯವಾಗಿದ್ದಾಗ ಹೆಸರಿಗೇ ಇರಲಿಲ್ಲ. ಅದೇನೆ ಇರಲಿ, ಮೊದಲೇ ಹೇಳಿದಂತೆ ಇಂದು ರಾಜಕೀಯ ಮಾತ್ರವಲ್ಲ, ಸಾಮಾಜಿಕ ಹೋರಾಟ, ಸಂಘಟನೆಯ ಆಶಯ ಕೂಡ ಬದಲಾಗಿದೆ.

ಹೀಗೆ ಬದಲಾದ ಕಾಲಘಟ್ಟದಲ್ಲಿ ಮೊ ಮು ಆಂಜನಪ್ಪ ರೆಡ್ಡಿ ಅವರಂತಹ ಹೃದಯವಂತ, ಸಹೃದಯಿ ನಾಯಕರನ್ನು ದುರ್ಬೀನು ಹಾಕಿ ಹುಡುಕಬೇಕಾಗಿದೆ. ಆ ಮೂಲಕ ಇನ್ನೂ ನಮ್ಮ ನಡುವೆ ಇದ್ದು ಸಕ್ರೀಯ ಜನಾಂಗ ಸಂಘಟನೆ, ಸಂಶೋಧನೆಯಲ್ಲಿ ತೊಡಗಿರುವ ಆಂಜನಪ್ಪ ರೆಡ್ಡಿಯವರಿಗೆ ಋಣಿಯಾಗಿರೋಣ…

Leave a Reply

Your email address will not be published. Required fields are marked *

Related Articles

Back to top button
error: Content is protected !!