CultureNews

Smt. Nanda 4th Year Commemoration- ಮೊ ಮು ಆಂಜನಪ್ಪ ರೆಡ್ಡಿರವರ ಬಾಳು ಬೆಳಗಿದ ನಂದಾದೀಪ | 4ನೇ ವರ್ಷದ ಪುರ್ಣಯ ಸ್ಮರಣೆ

ರಾಜಕೀಯ, ಸಾಹಿತ್ಯ, ಸಂಘಟನೆ, ಸಮಾಜ ಸೇವೆ, ವೈಚಾರಿಕ ಹೋರಾಟ… ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಮೊ.ಮು.ಆಂಜನಪ್ಪ ರೆಡ್ಡಿರವರ ಧರ್ಮಪತ್ನಿ ಶ್ರೀಮತಿ ನಂದಾ ಆಂಜನಪ್ಪ ರೆಡ್ಡಿರವರು ದೈವಾಧೀನರಾಗಿ ಇಂದಿಗೆ ನಾಲ್ಕು ವರ್ಷಗಳು. ಕಳೆದ 2022ರ ಮೇ 03ನೇ ತಾರೀಖು ಹೃದಯಾಘಾತಕ್ಕೆ ಬಲಿಯಾದ ಅವರ ನೆನಪು ಎಂದೆಂದಿಗೂ ಚಿರಸ್ಥಾಯಿ.

ಮೊ ಮು ಆಂಜನಪ್ಪ ರೆಡ್ಡಿ ಅವರ ಸಮಸ್ತ ಸಾಧನೆಗೂ ಬೆಂಗಾವಲಾಗಿದ್ದ ಶ್ರೀಮತಿ ನಂದಾರವರು ಸೌಜನ್ಯತೆಯ ಸಾಕಾರಮೂರ್ತಿಯಾಗಿದ್ದರು. ದೊಡ್ಡ ಕುಟುಂಬದಲ್ಲಿ ಹುಟ್ಟಿ, ಅಷ್ಟೇ ದೊಡ್ಡ ಕುಟುಂಬದ ಸೊಸೆಯಾಗಿದ್ದರೂ ನಿಗರ್ವಿಯಾಗಿದ್ದರು. ಅಂತಃಕರಣವುಳ್ಳ ವಿನಯಶೀಲ ಸದ್ಗೃಹಿಣಿಯಾಗಿದ್ದರು. ಅವರ ಹಠಾತ್ ಅಗಲುವಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ದೊಡ್ಡ ನಷ್ಟವನ್ನುಂಟು ಮಾಡಿದೆ.

ಶ್ರೀಮತಿ ನಂದಾ ಆಂಜನಪ್ಪ ರೆಡ್ಡಿ
ಶ್ರೀಮತಿ ನಂದಾ ಆಂಜನಪ್ಪ ರೆಡ್ಡಿ
ರೆಡ್ಡಿಯವರ ಬದುಕಿನ ಆಧರ ಸ್ತಂಭ

ಜೀವನದುದ್ದಕ್ಕೂ ಪ್ರೀತಿ ವಾತ್ಸಲ್ಯಮಯ ಬದುಕು ಬಾಳಿದ ಶ್ರೀಮತಿ ನಂದಾರವರ ಸಹಕಾರ, ಪ್ರೋತ್ಸಾಹವಿಲ್ಲದೇ ಹೋಗಿದ್ದರೆ ಪ್ರಾಯಶಃ ಆಂಜನಪ್ಪ ರೆಡ್ಡಿರವರು ಏಕಕಾಲಕ್ಕೆ ಅಷ್ಟೊಂದು ವಲಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲವೇನೋ? ಮನೆ ಕಡೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಶ್ರೀಮತಿ ನಂದಾರವರು ಪತಿಯನ್ನು ಸಮಾಜದ ಜೊತೆಗೆ ಬೆರೆಯಲು ಅನುವು ಮಾಡಿಕೊಟ್ಟಿದ್ದರು. ಪತ್ನಿಯ ಈ ಸಹಕಾರವನ್ನೇ ಸದ್ಭಳಕೆ ಮಾಡಿಕೊಂಡ ಆಂಜನಪ್ಪ ರೆಡ್ಡಿರವರು ಏಕಕಾಲಕ್ಕೆ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡರು.

ಸಂಪೂರ್ಣ ಕ್ರಾಂತಿಕಾರಿ ಮನೋಭಾವದ ಆಂಜನಪ್ಪ ರೆಡ್ಡಿಯವರು ಅದ್ಧೂರಿತನವನ್ನು ಧಿಕ್ಕರಿಸಿ ತಾಯಿ ಹೇಮರಡ್ಡಿ ಮಲ್ಲಮ್ಮನ ಜಯಂತಿಯ (1984ರಲ್ಲಿ) ದಿನವೇ ಸರಳ ವಿವಾಹವಾಗುವ ಮೂಲಕ ಆ ಕಾಲಕ್ಕೇ ಅನೇಕರಿಗೆ ಆದರ್ಶವಾದವರು. ಪೂರ್ವಜನ್ಮದ ಸುಕೃತವೆಂಬಂತೆ ಅವರ ಮನಃಸ್ಥಿತಿ ಮತ್ತು ಕ್ರಾಂತಿಕಾರಿ ಮನೋಭಾವನ್ನು ಅರಿತು ಬಾಳುವ ಪತ್ನಿಯಾಗಿ ಶ್ರೀಮತಿ ನಂದಾರವರು ಸಿಕ್ಕಿದ್ದರು.

ರೆಡ್ಡಿಯವರ ಸಾಧನೆಗೆ ದಾರದೀಪವಾದರು

ಬರೋಬ್ಬರಿ 36 ವರ್ಷಗಳ ಬಾಳ ಹೋರಾಟದಲ್ಲಿ ಈ ದಂಪತಿ ಸಮಾಜಕ್ಕೆ ಸಲ್ಲಿಸಿದ ಕೊಡುಗೆ ಅತ್ಯಮೂಲ್ಯವಾದದ್ದು. ಆಂಜನಪ್ಪ ರೆಡ್ಡಿರವರ ಬದುಕಿನ ಪ್ರತಿ ಸಾಧನೆಯಲ್ಲೂ ಶ್ರೀಮತಿ ನಂದಾರವರ ಹೆಜ್ಜೆ ಗುರುತು ಅಚ್ಚಳಿಯದೇ ಮೂಡಿದೆ. ಮಕ್ಕಳ ಓದು, ಕುಟುಂಬ ಜವಾಬ್ದಾರಿ, ಬಂಧುಗಳೊಂದಿಗಿನ ಬಾಂಧವ್ಯ, ಆಳು-ಕಾಳುಗಳ ನಿರ್ವಹಣೆಯ ಜೊತೆಗೆ ಪತಿಯ ಸಾಮಾಜಿಕ ಸಾಮಾಜಿಕ ಕಾರ್ಯ, ಸಮುದಾಯದ ಸಂಘಟನೆ, ಸಾಹಿತ್ಯಿಕ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿ ಪ್ರೋತ್ಸಾಹಿಸಿದ ಕೀರ್ತಿ ಶ್ರೀಮತಿ ನಂದಾರವರಿಗೆ ಸಲ್ಲುತ್ತದೆ.

ಅವರ ಆ ನೈತಿಕ ಬಲ, ಬೆಂಬಲದಿಂದಲೇ ಆಂಜನಪ್ಪ ರೆಡ್ಡಿರವರು ಒಂದಾದ ಮೇಲೊಂದರಂತೆ ಹಲವು ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಾಜಕೀಯ, ಸಾಹಿತ್ಯ, ಸಾಮಾಜಿಕ ಕಾರ್ಯಗಳ ಜೊತೆಗೆ ರೆಡ್ಡಿ ಸಮುದಾಯ ಸಂಘಟನೆಯತ್ತ ಚಿತ್ತ ಹರಿಸಿದರು. ಕರ್ನಾಟಕ ರೆಡ್ಡಿಜನ ಸಂಘದಲ್ಲಿ ಉನ್ನತ ಸ್ಥಾನ ಅಲಂಕರಿಸಿ ರೆಡ್ಡಿ ಸಮುದಾಯದ ಸಂಘಟನೆ ಹಾಗೂ ಜಾಗೃತಿಗೆ ವಿಶಿಷ್ಠ ಕೊಡುಗೆ ನೀಡಿದರು. ಸಮೃದ್ಧ ಇತಿಹಾಸವಿದ್ದೂ ಕೂಡ ತೆರೆಮರೆಯಲ್ಲಿ ಹೂತು ಹೋಗಿದ್ದ ರೆಡ್ಡಿ ಸಮುದಾಯದ ಚರಿತ್ರೆಯನ್ನು ಪಾತಾಳಗರಡಿ ಹಾಕಿ ಶೋಧಿಸಿದರು.

ಆದರ್ಶ ದಂಪತಿಗಳು...
ಆದರ್ಶ ದಂಪತಿಗಳು…
ಸಾಹಿತ್ಯ ಕೃಷಿಗೆ ಸ್ಫೂರ್ತಿ ದೇವತೆ

ಕರ್ನಾಟಕ ರೆಡ್ಡಿಜನ ಸಂಘದ ಮುಖವಾಣಿ ವೇಮನವಾಣಿ ಮಾಸ ಪತ್ರಿಕೆಗೆ ಸುದೀರ್ಘ ಕಾಲ ಸಂಪಾದಕರಾಗಿ ಜನಾಂಗದಲ್ಲಿ ಸಂಚಲನ ಮೂಡುವಂತಹ ಸಂಶೋಧನಾತ್ಮ ಬರಹ, ವಿಚಾರಗಳನ್ನು ಪ್ರಕಟಿಸಿದರು. ನಾಡು, ನುಡಿ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಕ್ರೀಯ ಹೋರಾಟದಲ್ಲಿ ಭಾಗಿಯಾದ ಅವರು ಮಹಾಯೋಗಿ ವೇಮನರ ಮಾನವಪ್ರೇಮ ತತ್ವ ಅನುಷ್ಠಾನಕ್ಕಾಗಿ ಬರವಣಿಗೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ದಾರ್ಶನಿಕ ವೇಮನ, ರೆಡ್ಡಿಕುಲ ಇತಿಹಾಸ ಮತ್ತು ಗೋತ್ರಗಳು, ಶಿಕ್ಷಣ ಶಿಲ್ಪಿ ಸರ್ ಸಿ.ಆರ್.ರೆಡ್ಡಿ, ವೇಮನ ನುಡಿಮುತ್ತುಗಳು ಮತ್ತು ವೇಮನ 108 ನೀತಿ ಪದ್ಯಗಳು ಸೇರಿದಂತೆ ಹಲವು ಮೌಲಿಕ ಕೃತಿಗಳನ್ನು ಸಮಾಜಕ್ಕೆ ಸಮರ್ಪಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ರೆಡ್ಡಿ ಸಮುದಾಯದ ಸಮಗ್ರ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಂಶೋಧನಾ ನೆಲೆಯಲ್ಲಿ ದಾಖಲಿಸಿದ ‘ರೆಡ್ಡಿ ಪರಂಪರೆ’ ಕೃತಿ ಕನ್ನಡದ ಮಟ್ಟಿಗೆ ಬಹು ಅಪರೂಪದ ಗ್ರಂಥವೆಂದೇ ಹೇಳಬೇಕು.

…ಹೀಗೆ ಆಂಜನಪ್ಪ ರೆಡ್ಡಿರವರ ಪ್ರತಿ ಕಾರ್ಯಗಳಲ್ಲೂ ಜೀವನ್ಮುಖಿಯಾಗಿ ಸ್ಪಂದಿಸಿ, ಹೃದಯಪೂರ್ವಕವಾಗಿ ಪ್ರೋತ್ಸಾಹಿಸಿ ಸ್ಪೂರ್ತಿ ದೇವತೆಯಾಗಿದ್ದ ಶ್ರೀಮತಿ ನಂದಾರವರು ಹೇಳದೇ ಕೇಳದೇ ಎದ್ದು ನಡೆದರು. ಇನ್ನೂ ಸಾಕಷ್ಟು ಜವಾಬ್ದಾರಿಗಳು ಇರುವಾಗಲೇ ಪರಮಾತ್ಮನ ಕರೆಗೆ ಓಗೊಟ್ಟರು. ಯಾರ ಬದುಕೂ ಶಾಶ್ವತವಲ್ಲ, ಆದರೆ ನಾಲ್ಕು ಜನಕ್ಕೆ ಉಪಕಾರಿಯಾದ, ಮಾತೃಹೃದಯಿ ಜೀವಗಳು ಹೀಗೆ ಹಠಾತ್ತನೇ ಕಣ್ಮರೆಯಾಗುವುದು ನಿಜಕ್ಕೂ ಭರಸಲಾರದ ದುಃಖವೇ.

ತುಂಬು ಕುಟುಂಬದೊAದಿಗೆ ಶ್ರೀಮತಿ ನಂದಾ ಆಂಜನಪ್ಪ ರೆಡ್ಡಿ...
ತುಂಬು ಕುಟುಂಬದೊಂದಿಗೆ ಶ್ರೀಮತಿ ನಂದಾ ಆಂಜನಪ್ಪ ರೆಡ್ಡಿ…
ಇಂದು 4ನೇ ವರ್ಷದ ಪುಣ್ಯತಿಥಿ

ಪ್ರೀತಿ ವಾತ್ಸಲ್ಯದ ಬದುಕನ್ನು ಕಲಿಸಿ ಆದರ್ಶದ ಬದುಕನ್ನು ಬಾಳಿ ಸರಳ ಸೌಜನ್ಯತೆಯ ಸಾಕಾರ ಮೂರ್ತಿಯಾಗಿದ್ದ ಶ್ರೀಮತಿ ನಂದಾ ಅಮ್ಮನವರು ಅಗಲಿ ಇಂದಿಗೆ ನಾಲ್ಕು ವರ್ಷ ಕಳೆದರೂ, ಅವರ ಸವಿನೆನಪು ಎಲ್ಲರ ಹೃದಯಾಂತರಾಳದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಆದರ್ಶಮಯ ಜೀವನ ಕಿರಿಯರಿಗೆ ಸದಾ ದಾರಿದೀಪವಾಗಿದೆ.

ಇಂದು ಮೇ 03ರಂದು ಮೊ ಮು ಆಂಜನಪ್ಪ ರೆಡ್ಡಿ ಅವರ ಕಸ್ತೂರಿನಗರದ ಸ್ವಗೃಹದಲ್ಲಿ 4ನೇ ವರ್ಷದ ಪುಣ್ಯತಿಥಿ ಸಮಾರಂಭ ಏರ್ಪಡಿಸಲಾಗಿದೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ…

| ಮಾಲತೇಶ್ ಎಂ.,

Leave a Reply

Your email address will not be published. Required fields are marked *

Related Articles

Back to top button
error: Content is protected !!