
ಕರ್ನಾಟಕ ರಾಜ್ಯದಲ್ಲಿ ನಿಜಕ್ಕೂ ರೆಡ್ಡಿಗಳ ಜನಸಂಖ್ಯೆ ಎಷ್ಟಿದೆ? ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುವಾರು ಪ್ರಾಬಲ್ಯ ಹೇಗಿದೆ? ಎಂಬ ವಿವರವಾದ ಮಾಹಿತಿ ಇಲ್ಲಿದೆ…
ಜಾತಿ ಜನಗಣತಿಯು ರಾಜ್ಯದಲ್ಲಿ ಕಿಚ್ಚು ಹೊತ್ತಿಸಿದೆ. ಸದರಿ ಸಮೀಕ್ಷಾ ವರದಿ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ ಸೋರಿಕೆಯಾಗಿರುವ ವಿವಿಧ ಜಾತಿ ಜನಸಂಖ್ಯೆಗಳ ಅಂಕಿ-ಅಂಶಗಳು ವಿವಾದವನ್ನು ಎಬ್ಬಿಸಿವೆ. ಪ್ರಮುಖವಾಗಿ ರಾಜ್ಯದಲ್ಲಿ ಈ ತನಕ ಪ್ರಬಲ ಜಾತಿಗಳು ಅನ್ನಿಸಿಕೊಂಡಿದ್ದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಈ ಗಣತಿ ಸಮೀಕ್ಷೆಯನ್ನು ಸಂಪೂರ್ಣ ಅಲ್ಲಗಳೆದಿವೆ. ಇದು ಸಹಜವಾಗಿಯೇ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಇಲ್ಲಿ ಗಮನಿಸುವ ಅಂಶವೆಂದರೆ, ಸಾಕಷ್ಟು ಐತಿಹಾಸಿಕ ಪರಂಪರೆಯನ್ನು ಹೊಂದಿರುವ ರೆಡ್ಡಿ ಜನಸಂಖ್ಯೆಯ ಅಂಕಿ-ಅಂಶಗಳು ಸಮುದಾಯದ ಜನರಲ್ಲಿ ಬೇಸರವನ್ನುಂಟು ಮಾಡಿವೆ. ಏಕೆಂದರೆ ರಾಜ್ಯ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿರುವ ರೆಡ್ಡಿಗಳು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಈಗ ಸೋರಿಕೆಯಾಗಿರುವ ಜಾತಿ ಗಣತಿ ಸಮೀಕ್ಷೆಯ ಅಂಕಿ-ಅಂಶಗಳಲ್ಲಿ ರೆಡ್ಡಿಗಳನ್ನು ಲಿಂಗಾಯತ ಹಾಗೂ ಒಕ್ಕಲಿಗ ಎರಡು ಸಮುದಾಯಗಳಲ್ಲಿ ಹರಿದು ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: Hemareddy Mallamma History- ಜಾತಿಗಳನ್ನು ಮೀರಿದ ಮಾಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ | ರೆಡ್ಡಿಕುಲ ಮಹಾಮಾತೆಯರು ಸರಣಿ-1
ಲಿಂಗಾಯತ, ಒಕ್ಕಲಿಗರಲ್ಲಿ ರೆಡ್ಡಿಗಳ ಹಂಚಿಕೆ
ತಮ್ಮದೇ ಆದ ಇತಿಹಾಸ, ಪರಂಪರೆ, ಪ್ರತ್ಯೇಕ ಸಂಘ-ಸಂಸ್ಥೆ, ಸಂಘಟನೆಯನ್ನು ಹೊಂದಿರುವ ರೆಡ್ಡಿಗಳನ್ನು ಪ್ರತ್ಯೇಕವಾಗಿ ಗುರುತಿಸುವ ಕಾರ್ಯ ಆಗದೇ ಇದ್ದುದರಿಂದ ಈ ಅಂಕಿ-ಅಂಶಗಳು ಗೊಂದಲವನ್ನು ಸೃಷ್ಟಿಸಿವೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಪ್ರಕಾರ ರೆಡ್ಡಿಗಳನ್ನು ಪ್ರವರ್ಗ 3ಎ ಗುಂಪಿಗೆ ಸೇರುವ ಒಕ್ಕಲಿಗ ಸಮುದಾಯದಲ್ಲಿ ಸೇರಿಸಿ ಈ ಕೆಳಗಿನಂತೆ ಅಂಕಿಅಂಶಗಳು ಸೋರಿಕೆಯಾಗಿವೆ:
- ರೆಡ್ಡಿ ಒಕ್ಕಲಿಗ -24,059
- ಮರಸು ಒಕ್ಕಲಿಗ -3,859
- ರೆಡ್ಡಿ -4,15,382
- ರಡ್ಡಿ -2,87,372
- ಒಟ್ಟು ಜನಸಂಖ್ಯೆ -7,30,672
ಅದೇ ರೀತಿ ಪ್ರವರ್ಗ 3ಬಿ ಗುಂಪಿಗೆ ಸೇರುವ ಲಿಂಗಾಯತ ಸಮುದಾಯದಲ್ಲಿ ರಡ್ಡಿ ಲಿಂಗಾಯತ (33,606) ಎಂಬ ಉಪ ಪಂಗಡದ ಅಡಿಯಲ್ಲಿ ರೆಡ್ಡಿಗಳನ್ನು ಸೇರಿಸಿ ಜಾತಿ ಜನಸಂಖ್ಯೆ ಲೆಕ್ಕಾಚಾರ ಮಾಡಲಾಗಿದೆ. ಅಲ್ಲಿಗೆ ಒಕ್ಕಲಿಗ ಉಪ ಪಂಗಡಗಲಲ್ಲಿ 7,30,672 ಹಾಗೂ ಲಿಂಗಾಯತ ಉಪ ಪಂಗಡದಲ್ಲಿ 33,606 ಸೇರಿ ಒಟ್ಟು 7,64,278 ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ.
ಒಕ್ಕಲಿಗ ಮತ್ತು ಲಿಂಗಾಯತ ಎರಡೂ ಸಮುದಾಯಗಳ ಉಪ ಪಂಗಡಗಳಾಗಿ ರೆಡ್ಡಿಗಳನ್ನು ಹಂಚಿಕೆ ಮಾಡಿದರೂ ಲಭ್ಯವಾಗಿರುವ ಅಂಕಿ-ಅಂಶಗಳು ತೀರಾ ಕನಿಷ್ಟವೆಂದೇ ಹೇಳಬೇಕು. ನಮ್ಮ ಅಂದಾಜಿನ ಪ್ರಕಾರ ಈ ಸಂಖ್ಯೆಯ ಎರಡು ಪಟ್ಟು ಜನಸಂಖ್ಯೆ ಕೇವಲ ಬೆಂಗಳೂರು ಒಂದರಲ್ಲೆ ಇದೆ. ಬೆಂಗಳೂರು ಪೂರ್ವ, ಉತ್ತರ ತಾಲ್ಲೂಕು ಮತ್ತು ಆನೇಕಲ್ಲು ತಾಲ್ಲೂಕುಗಳಲ್ಲಿ ರೆಡ್ಡಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರೆಡ್ಡಿ ಸಮಾವೇಶದಲ್ಲಿ ಲಕ್ಷ ಲಕ್ಷ ರೆಡ್ಡಿಜನ ಸೇರಿದ್ದರು.
ಇದನ್ನೂ ಓದಿ: Reddy Suryavamsa- ರೆಡ್ಡಿಗಳು ಶ್ರೀರಾಮನ ವಂಶಸ್ಥರು

ದೇಶಾದ್ಯಂತ ಚದುರಿದ ರೆಡ್ಡಿಗಳ ಹೆಜ್ಜೆ ಗುರುತು
ನಿಜಕ್ಕಾದರೆ, ಹಲವು ವಿಶಿಷ್ಟತೆಯನ್ನು ಹೊಂದಿರುವ ದಖನ್ ಪ್ರಸ್ಥಭೂಮಿ ಎಡ್ಡಿಗಳ ಮೂಲ ಸ್ಥಾನವಾದರೂ ರೆಡ್ಡಿಗಳು ವಿಶ್ವವ್ಯಾಪಿ ಹಂಚಿಕೆಯಾಗಿದ್ದಾರೆ. ಅದರಲ್ಲೂ ದಕ್ಷಿಣ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ್ರದ ತೆಲಂಗಾಣ-ರಾಯಲಸೀಮೆಯನ್ನು ಒಳಗೊಂಡ ಪ್ರದೇಶ ರೆಡ್ಡಿಗಳ ಮೂಲಸ್ಥಾನವಾಗಿದೆ. ಆದರೆ, ಕೇವಲ ಈ ಪ್ರದೇಶಗಳಲ್ಲಷ್ಟೇ ರೆಡ್ಡಿಗಳು ನೆಲೆಸದೆ ನದಿಯೊಂದು ಹುಟ್ಟಿ ವಿವಿಧ ಪ್ರದೇಶಗಳಲ್ಲಿ ಹರಿದು ಸಮುದ್ರ ಸೇರುವಂತೆ ರೆಡ್ಡಿಗಳು ದಖನ್ ಪ್ರಸ್ಥಭೂಮಿ ಪ್ರದೇಶದಿಂದ ದೇಶದ ಉದ್ದಗಲಕ್ಕೂ ಬಾಹು ಚಾಚಿಕೊಂಡಿದ್ದಾರೆ. ವಿದೇಶಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಭಾರತದ ಭೂಶಿರವೆಂದು ಕರೆಯುವ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ತನಕ ರೆಡ್ಡಿ ಜನಾಂಗ ಚದರಿಕೊಂಡಿದೆ.
ಓರಿಸಾ ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡುಗಳಲ್ಲಿ ರೆಡ್ಡಿ ಜನಸಂಖ್ಯೆ ಅಧಿಕವಾಗಿದೆ. ಕೇರಳ, ಪಾಂಡಿಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ರೆಡ್ಡಿಗಳಿರುವುದು ತಿಳಿದು ಬಂದಿದೆ. ಆಂಧ್ರಪ್ರದೇಶದಲ್ಲಿ ರೆಡ್ಡಿಜನರ ಸಂಖ್ಯೆ ಅಸಂಖ್ಯವೆಂದೇ ಹೇಳಬೇಕು.
ರಾಷ್ಟçಕೂಟರ ಆಳ್ವಿಕೆಯ ಕಾಲದಿಂದಲೂ ರೆಡ್ಡಿಗಳು ಇಲ್ಲಿಯ ಕರಾವಳಿ ಆಂಧ್ರದ ನೆಲ್ಲೂರು, ಪ್ರಕಾಶಂ, ಗುಂಟೂರು ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲೂ, ಗೋದಾವರಿ, ಕೃಷ್ಣ, ವಿಶಾಖಪಟ್ಟಣ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯಲ್ಲೂ ಹಾಗೂ ರಾಯಲಸೀಮಾ, ತೆಲಂಗಾಣ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲೂ ಇದ್ದಾರೆ. ಆಂಧ್ರದಲ್ಲಿನ 1104 ಮಂಡಲಗಳಲ್ಲಿ ಸುಮಾರು 700 ಮಂಡಲಗಳಲ್ಲಿ ರೆಡ್ಡಿ ಜನರು ಚದುರಿದ್ದು; ಇಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೆಡ್ಡಿ ಜನಾಂಗವಿದೆ.
ಕರ್ನಾಟಕದಲ್ಲಿ ರೆಡ್ಡಿಗಳ ಪ್ರಾಬಲ್ಯ
ಒಂದು ಹಂತಕ್ಕೆ ದಖನ್ ಪ್ರಸ್ಥಭೂಮಿಯ ಸಿಂಹ ಭಾಗವನ್ನು ಆವರಿಸಿಕೊಂಡಿರುವ ಕರ್ನಾಟಕದಲ್ಲಿ ರೆಡ್ಡಿ ಜನಾಂಗ ಅಲ್ಪಸಂಖ್ಯಾತರೇನಲ್ಲ. ಜಿಲ್ಲಾವಾರು ಲೆಕ್ಕ ಹಾಕಿದರೆ ಹದಿನೈದು ಜಿಲ್ಲೆಯ ಐವತ್ತಾರು ತಾಲ್ಲೂಕುಗಳಲ್ಲಿ ರೆಡ್ಡಿ ಜನಾಂಗದ ಪ್ರಾಬಲ್ಯವಿದೆ. ಈ ಐವತ್ತಾರು ತಾಲ್ಲೂಕುಗಳ ಪೈಕಿ ಸುಮಾರು ನಲವತ್ತು ತಾಲ್ಲೂಕುಗಳಲ್ಲಿ ರಾಜಕೀಯವಾಗಿ ಇವರೆ ನಿರ್ಣಾಯಕರು. ಕರ್ನಾಟಕದಲ್ಲಿ ರೆಡ್ಡಿಜನರ ಪ್ರಾಬಲ್ಯವನ್ನು ಹೀಗೆ ಗುರುತಿಸಬಹುದು…
ಬೆಂಗಳೂರು ನಗರ, ಪೂರ್ವ-ಉತ್ತರ ತಾಲ್ಲೂಕು ಮತ್ತು ಬೆಂಗಳೂರು ನಗರ ಜಿಲ್ಲೆ ಮತ್ತು ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೆಡ್ಡಿಗಳ ಸಂಖ್ಯೆ ಗಣನೀಯ. ಹಾಗೇನೆ ಕೋಲಾರ ಜಿಲ್ಲೆಯ ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆ.ಜಿ.ಎಫ್, ಬೇತಮಂಗಲ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆಗಳಲ್ಲಿ ರೆಡ್ಡಿ ಜನರ ಪ್ರಾಬಲ್ಯವಿದೆ.
ಇನ್ನು ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಶಿರಾ ಹಾಗೂ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಿರಗುಪ್ಪ, ಕುರಗೋಡು, ಹಗರಿಬೊಮ್ಮನಹಳ್ಳಿ, ಇತ್ತ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಗಳಲ್ಲಿ ರೆಡ್ಡಿ ಜನರು ರಾಜಕೀಯವಾಗಿ ಮಾತ್ರವಲ್ಲ ವಿವಿಧ ರಂಗಗಳಲ್ಲೂ ಪ್ರಬಲರು.
ಇದನ್ನೂ ಓದಿ: Karnataka Reddys Contribution – ಕನ್ನಡ ನಾಡು ನುಡಿಗೆ ರೆಡ್ಡಿಗಳ ಕೊಡುಗೆ
ಉತ್ತರ ಕರ್ನಾಟಕದಲ್ಲಿ ರೆಡ್ಡಿಗಳು
ಉತ್ತರ ಕರ್ನಾಟಕದಲ್ಲಿ ರೆಡ್ಡಿಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇದೆಯಾದರೂ ಇಲ್ಲಿಯ ಜನರಲ್ಲಿ ತಮ್ಮ ಹೆಸರಿನ ಮುಂದೆ ‘ರೆಡ್ಡಿ’ ಬದಲಿಗೆ ಹಿರಿಯರ ಅಥವಾ ಮನೆಯ ಹೆಸರು ಇರುವುದರಿಂದ ಅವರನ್ನು ನಿಖರವಾಗಿ ಗುರುತಿಸುವುದು ಕೊಂಚ ಕಷ್ಟಕರವಾಗಿದೆ.
ಉತ್ತರ ಸೀಮೆಯ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಮುದೋಳ್, ಬೀಳಗಿ, ಜಮಖಂಡಿ, ಬಾದಾಮಿ, ಹುನಗುಂದ ತಾಲ್ಲೂಕುಗಳು ಮತ್ತು ಗದಗ ಜಿಲ್ಲೆಯ ಗದಗ, ನರಗುಂದ, ನವಲಗುಂದ, ಶಿರಹಟ್ಟಿ, ರೋಣ ತಾಲ್ಲೂಕುಗಳು ಹೆಚ್ಚು ಕಮ್ಮಿ ರೆಡ್ಡಿ ಪ್ರಾಬಲ್ಯದ ತಾಲ್ಲೂಕುಗಳೆಂದೆ ಪ್ರಖ್ಯಾತವಾಗಿವೆ.
ಹಾಗೇನೆ ಸಕ್ಕರೆ ಸೀಮೆ ಬೆಳಗಾವಿ ಜಿಲ್ಲೆಯಲ್ಲಿ ಗೋಕಾಕ, ರಾಮದುರ್ಗ, ಸವದತ್ತಿ ತಾಲ್ಲೂಕುಗಳು, ಇತ್ತ ಬೆಳಗಾವಿ ಗ್ರಾಮಾಂತರ ಮತ್ತು ಬೆಳಗಾವಿ ನಗರ ಪ್ರದೇಶದಲ್ಲಿ ರೆಡ್ಡಿಜನರ ಬಲವಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಾವೇರಿ, ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ಬಿಜಾಪುರ, ಸಿಂದಗಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ರಾಯಚೂರು, ಸಿಂಧನೂರು, ಲಿಂಗಸೂರು, ಅತ್ತ ಗುಲ್ಪರ್ಗ ಜಿಲ್ಲೆಯಲ್ಲಿ ಚಿಂಚೋಳಿ, ಯಾದಗಿರಿ, ಜೇವರ್ಗಿ, ಗುರುಮಿಟ್ಕಲ್ ಕ್ಷೇತ್ರಗಳು ರೆಡ್ಡಿ ಪ್ರಾಬಲ್ಯದ ಕ್ಷೇತ್ರಗಳೆಂದು ಗುರುತಿಸಬಹುದು.
ಇನ್ನು ಶರಣರನಾಡು ಬೀದರ್ ಜಿಲ್ಲೆಯ ಎಲ್ಲಾ ಆರು ಕ್ಷೇತ್ರಗಳಾದ ಬೀದರ್, ಬಾಲ್ಕಿ, ಬೀದರ್ ದಕ್ಷಿಣ, ಔರಾದ್, ಬಸವ ಕಲ್ಯಾಣ, ಹುಮನಾಬಾದ್ ಮತ್ತು ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಯಲಬುರ್ಗ ತಾಲ್ಲೂಕುಗಳಲ್ಲಿ , ಧಾರವಾಡ ಜಿಲ್ಲೆಯ ನವಲಗುಂದ, ಕಲಘಟಗಿ, ಕುಂದಕೋಳ ತಾಲ್ಲೂಕುಗಳಲ್ಲಿ ರೆಡ್ಡಿ ಜನ ಪ್ರಾಬಲ್ಯ ಗಣನೀಯ ಸಂಖ್ಯೆಯಲ್ಲಿದೆ.
ಹೀಗೆ ಈ ಜಿಲ್ಲೆ, ತಾಲ್ಲೂಕುವಾರು ವೈಯಕ್ತಿಕ ಸಮೀಕ್ಷೆ ನಡೆಸುತ್ತ ಬಂದರೆ ಕರ್ನಾಟಕದಲ್ಲಿ ರೆಡ್ಡಿಗಳ ಅಸಲು ಜನಸಂಖ್ಯೆ ತಿಳಿಯಲಿದೆ. ಸಮುದಾಯದ ಹಿತದೃಷ್ಟಿಯಿಂದ ರೆಡ್ಡಿ ಜನ ಸಮುದಾಯದಲ್ಲಿ ಅಂಥದೊಂದು ಆಂತರಿಕ ಸಮೀಕ್ಷೆ ನಡೆಸಬೇಕಾದ ತುರ್ತಿದೆ.
-ಮೊ ಮು ಆಂಜನಪ್ಪ ರೆಡ್ಡಿ (ರೆಡ್ಡಿ ಸಮುದಾಯದ ಹಿರಿಯ ಬರಹಗಾರರು)
MoMu Anjanappa Reddy Birthday- ಉತ್ಸಾಹಿ ನಾಯಕ ಮೊ ಮು ಆಂಜನಪ್ಪ ರೆಡ್ಡಿಯವರಿಗೆ ಜನ್ಮೋತ್ಸವದ ಶುಭಾಶಯಗಳು